Wednesday, April 2, 2014

✍ ಜಿಂದಗಿ ಕ್ಯಾ ಚೀಜಹೇ

 ದೇವರನ್ನೂ ಕೂಡ ಖಾಸಗಿಯಾಗಿ ಕಂಡು ಕೈ ಮುಗಿದುಬರುವ ನನಗೆ, ಹೀಗೆ ಸಾರ್ವಜನಿಕವಾಗಿ ಬ್ಲಾಗೊಂದನ್ನ ತೆರೆಯಬೇಕೆಂಬ ಹಂಬಲ ಅದು ಹೇಗೆ ಬಂತೋ ಗೊತ್ತಿಲ್ಲ! ಒಂದೊಂದು ದಿನ ಒಂಟಿ ಅನಿಸಿದಾಗ ಒಮ್ಮೆ ಈ ಬರವಣಿಗೆಗಳು ಅದಕ್ಕೆ ನಿಮ್ಮ ಅನಿಸಿಕೆಗಳನ್ನೆಲ್ಲ ತಿರುವಿ ಹಾಕಿದರಷ್ಟೇ ಸಾಕು, ಏನೋ ಒಂಥರದ ಸಮಾಧಾನ.
  ಜಗತ್ತು ಬದಲಾಗುತ್ತಿರುವ ವೇಗವನ್ನ ನೋಡುತ್ತಿದ್ದರೆ ಭಯವಾಗುತ್ತಿದೆ! ಏನನ್ನ ಸಾಧಿಸುವುದಕ್ಕಾಗಿ ಈ ಪರಿ ವೇಗ?ಟೆಕ್ನಾಲಜಿ ಅನ್ನುವ ಹೆಸರಲ್ಲಿ ಬದುಕಿನ ಸರಳತೆಯನ್ನ ಕಳೆದುಕೊಳ್ಳುತ್ತಿದ್ದೆವೇನೋ ಅನಿಸುತ್ತಿದೆ. ಒಂದೇ ಖುಷಿಯೆಂದರೆ, ನಮ್ಮ ಬಾಲ್ಯವನ್ನ ಇಷ್ಟೊಂದು ಗ್ಯಾಜೆಟ್ ಗಳ ನಡುವೆ ಕಳೆದಿಲ್ಲ.  ಬಾಲ್ಯದ ನೆನಪು ಯಾವಾಗಲೂ ಹಸಿರು. ನಮ್ಮ ಸುತ್ತ ಒಂದು ‘ವರ್ಚುಯಲ್ ‘ ಜಗತ್ತನ್ನ ಸೃಷ್ಟಿಸಿಕೊಂಡು, ಅದರಲ್ಲೇ ಕಾಲಹರಣ ಮಾಡುತ್ತಿದ್ದೇವೆ. ಮೊದಿಲನ ಆತ್ಮೀಯತೆ ಉಳಿದಿಲ್ಲ ! ಎಲ್ಲರೂ whatsApp,Facebook ಗಳಲ್ಲಿ ತೂರಿಕೊಂಡು ಹೊರಬರಲಾಗದೆ ಚಡಪಡಿಸುತ್ತಿರುವ  ಮೀನುಗಳೇ . ನಾವು ಅವುಗಳನ್ನ ಬಿಟ್ಟರೂ ಅವು ನಮ್ಮನ್ನ ಬಿಡವು ! ಕೊನೆಯಪಕ್ಷ ಆತ್ಮೀಯರ ಜನ್ಮದಿನದ ಶುಭ ಸಂದರ್ಭದಲ್ಲಾದರೂ  ಅವರಿಗೆ ಖುದ್ದಾಗಿ ಪೋನಾಯಿಸಿ ಮಾತಾಡುವ ಒಂದು ದುರಭ್ಯಾಸವನ್ನ ಬೆಳೆಸಿಕೊಳ್ಳುವುದು ಉತ್ತಮ.
  ಬಿಳಿ ಹಾಳೆಯಮೇಲೆ ಇವನ್ನೆಲ್ಲ ಬರೆದದ್ದಾಯಿತು, ಈಗ ಅದನ್ನ ಬ್ಲಾಗಲ್ಲಿ ತುಂಬುವ ಕೆಲಸಕ್ಕೆ ಗೂಗಲ್ ವಾಯ್ಸ್ ನ ಮೊರೆ ಹೋದರೆ ಹೇಗೆ? ಕೀಬೋರ್ಡ್ ನಲ್ಲಿ ಇವನ್ನೆಲ್ಲ ಕುಟ್ಟಲಿಕ್ಕೆ ಬೇಜಾರು (:p). ಆಚೆ ಬಿಸಿಲ ತಾಪ, ಇನ್ನೆರಡು ತಿಂಗಳು ಚುನಾವಣೆಯ ಶಾಪ.  ಬದುಕು ಬಿರು ಬೇಸಿಗೆಯಾಗಿಬಿಟ್ಟಿದೆ, ಕೊಂಚ ಮಳೆ ಬಂದು ತಂಪೆರೆಯ ಬಾರದೇ!