Tuesday, January 29, 2019

✍ ಮಾತು ಮಂಥನ

ಮಾತಿನಲ್ಲಿ ಮನೆ ಕಟ್ಟಬಹುದಂತೆ, ಮಾತು ಮನಸ್ಸನ್ನ ಕೆಡಿಸಬಹುದಂತೆ. ಮೌನವೇ ಮಾತಾದಾಗ ಇದ್ಯಾವುದರ ತಲೆಬಿಸಿ ಇಲ್ಲ ನೋಡಿ. ಮಾತಿಗೆಲ್ಲಿಂದ ತೂಕ? ಆದರೆ  ಹಗುರವಾಗಿ ಮಾತಾಡುವನನ್ನ ಈ ಜಗತ್ತು ಯಾವತ್ತೂ ತೂಗುವುದಿಲ್ಲ. ತೂಕದ ಮಾತಾಡಿ, ಸೂತಕದ ಮಾತಲ್ಲ!
ಎಲ್ಲರಿಗೂ ಗೌರವ ಕೊಟ್ಟು ಮಾತಾಡುವುದು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಹೊರತು ಮತ್ತೇನೂ ಅಲ್ಲ.

ನಾವು ಏನು ನೋಡುತ್ತೇವೋ, ಏನು ಓದುತ್ತೀವೋ, ನಮ್ಮ ಅನುಭವಗಳಿಂದ, ಈ ಪ್ರಕ್ತೃತಿಯಿಂದ ಏನೂ ಕಲಿಯದೆ ಹೋದರೆ ಈ ಹುಟ್ಟಿಗೊಂದು ಅರ್ಥ ಎಲ್ಲಿ? ದೇಹಕ್ಕೆ ವಯಸ್ಸಾಗುತ್ತದೆ ಹೊರತೂ ಬುದ್ಧಿಗೆ ಎಲ್ಲಿಂದ ಆಹಾರ? ಬರೀ ಸುಳ್ಳುಗಳಲ್ಲೇ ಜೀವಿಸುತ್ತೆವೆಯೇ ಹೊರತು ಸತ್ಯದಲ್ಲಲ್ಲ ಹಾಗೂ ಸತ್ಯವಿಲ್ಲದ ಬಾಳು ಅದು ಸತ್ತಂತೆ.

ಜೀವನದಲ್ಲಿ ನಾವು ಸಣ್ಣ ಪುಟ್ಟ ವಿಚಾರಗಳನ್ನೇ ಗಂಭೀರವಾಗಿ ಪರಿಗಣಿಸಿ, ಬೇಕಾದವನ್ನೆಲ್ಲ ಕಡೆಗಣಿಸಿ, ಗುಣಿಸಿ, ಕೂಡಿ  ಕಳೆದು ಅಳಿಸಿ, ಆಕಳಿಸುವುದೇ ಹೆಚ್ಚು. ಗಳಿಸಿದ್ದೇನು, ಉಳಿಸಿದ್ದು ಯಾರಿಗೆ? ಆಳಿ ಅಳಿದ ಮೇಲೆ ಉಳಿದದ್ದೇನು? ತಾವೂ ಸುಖ ಪಡದೇ, ಇತರರಿಗೂ ಬಿಡದೇ, ಸದಾ ಕೊರಗಿ, ಕರಗಿ, ಬೆರೆಯದೇ ಹೋದರೇನು ಬಂತು. ಬದುಕನ್ನ ಪ್ರೀತಿಸದೇ, ಅದನ್ನ ಸ್ವೀಕರಿಸದೆ ನಡೆದರೆ ದುಃಖ ತಪ್ಪಿದ್ದಲ್ಲ. ತಪ್ಪು ನಮದೆಲ್ಲ. ಬಹುಶಃ ಯಾವ ಜೀವಿಯೂ ನಾನು ಹೀಗೇ ಇರಬೇಕೆಂದು ಹಾತೊರೆದು ಬದುಕುವುದಿಲ್ಲ,ಅವು ಪ್ರಕೃತಿಯನ್ನು ಗೌರವಿಸುತ್ತ ನಡೆಯುತ್ತವೆ. ನಾವು ಮಾತ್ರ ಅಹಂಕಾರಿಗಳು, ಅತೀ ಮಾನುಷರು! ಬದುಕಿ ಬದುಕಲು ಬಿಡಿ.

ಪ್ರಸಿದ್ಧ ನಟರೊಬ್ಬರು ಹಲವು ವರ್ಷಗಳ ಹಿಂದೆ ಹೇಳಿದ ಮಾತು "The world has become a giant megamall and the only thing they're selling is dissatisfaction. Make sure your neighbor doesn't get more."

ನಾವೆಲ್ಲ ಕರಗುವವರು, ಕೊರಗಿದಷ್ಟು ಬೇಗ. ಅದೆಷ್ಟುದಿನದ ಯೋಗ? ಅದಕ್ಕೇ, ದೇಶ ಕಟ್ಟಿ, ಮನೆಯನ್ನಲ್ಲ! 

Wednesday, January 2, 2019

✍ ಮೂರ್ಖನ ಮಾತುಗಳು !


ಕೆಲವೊಂದು ಪುಸ್ತಕಗಳು ಹಾಗೇ , ಓದಲಿಕ್ಕೆ ಕೂತರೆ ಸಾಕು ಓದಿ ಮುಗಿಸುವವರೆಗೆ ಹೊರ ಜಗತ್ತೆಲ್ಲ ನಗಣ್ಯ ! ಅದೊಂಥರದ ಧ್ಯಾನ. ನಿನ್ನೆ ಎಲ್ಲೋ ಬಂಧುಗಳ ಮನೆಗೆ ಹೋದಾಗ ತಗಲಾಕಿಕೊಂಡ ಪುಸ್ತಕ ಅದು. ಪುಸ್ತಕದ ಹೊನ್ನುಡಿ, ಮುನ್ನುಡಿ, ಬೆನ್ನುಡಿ ಎಲ್ಲ ಅದ್ಭುತವಾಗಿ ಬರೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಆಕರ್ಷಿಸಿದ್ದು ಅದರ ಶೀರ್ಷಿಕೆ "ಮೂರ್ಖನ ಮಾತುಗಳು .. !". ಈಗೀಗ ಬುದ್ಧಿವಂತಿಕೆ ಜಾಸ್ತಿ ಆದವರೇ ತುಂಬಿ ಹೋಗಿರುವಾಗ ಇಂಥ ಶೀರ್ಷಿಕೆ ಬಹು ಸಮಂಜಸ! ಮೂರ್ಖನ ಮಾತೇಕೆ ನಾವು ಬುದ್ಧಿಜೀವಿಗಳು ಓದಬೇಕು, ಅಲ್ಲವಾ ! ಲೇಖಕರೇ ಹೇಳುವಂತೆ ಓದಲಿಕ್ಕೆ ಯೋಗ ಬೇಕು, ಹಾಗೆ ಬರೆಯಲಿಕ್ಕೂ ಕೂಡ.

ಎಲ್ಲ ಗಲಾಟೆ -ಗದ್ದಲಗಳ ನಡುವೆಯೇ, ಮಧ್ಯಾಹ್ನ ಓದಲಿಕ್ಕೆ ಕೈಗೆತ್ತಿಕೊಂಡ ಆ ಹೊತ್ತಿಗೆಯ ಗುಂಗು ಇಳಿದದ್ದು ರಾತ್ರಿ ೧೦ ಗಂಟೆಗೆ! ಹೊಸ ವರ್ಷದ ಮೊದಲ ದಿನವೇ ಒಂದು ಅದ್ಭುತವಾದ ಆಹಾರ ಮನಸ್ಸಿಗೆ ! ಭಯಂಕರ ಹಸಿದವನಿಗೆ ಸಿಕ್ಕಿದ್ದು ಗೀತಾಮೃತ! ಅದೆಷ್ಟು ಸುಲಭವಾಗಿ, ಹಿತವಾಗಿ ಬರವಣಿಗೆ ತೆರೆದುಕೊಳ್ಳುತ್ತದೆಯೋ ಮುಂದೆ ಹೋದಂತೆಲ್ಲ ಜೀವನದ ಒಂದೊಂದೇ ವಿಸ್ಮಯಗಳ್ಳನ್ನ ನಿಮ್ಮ ಮುಂದಿಡುತ್ತಾ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತ , ಒಮ್ಮೆ ನಗಿಸುತ್ತಾ, ಒಮ್ಮೊಮ್ಮೆ ಅಳಿಸುತ್ತಾ ಸಾಗುತ್ತದೆ. ಪುಸ್ತಕ ಓದಿ ಮುಗಿದಮೇಲೆ ಅನಿಸಿದ್ದಿಷ್ಟು , ಕಲಿತದ್ದೆಷ್ಟು , ಜೀವನದಲ್ಲಿ ಅಳವಡಿಸಿಕೊಂಡದ್ದೆಷ್ಟು, ಬಗೆದಷ್ಟೂ, ಬರೆದಷ್ಟೂ , ಬಾರದಿರುವುದಿನ್ನೆಷ್ಟು , ಒಟ್ಟಿನಲ್ಲಿ ಬೆಸ್ಟೊ ಬೆಸ್ಟು !ಬದುಕಿನ ಹೊಸ ಆಯಾಮವನ್ನೇ ತೆರೆದುಕೊಡುತ್ತದೆ ! ಸಾಧ್ಯವಾದರೆ ಕೊಂಡು ಓದಿ, "ಮೂರ್ಖನ ಮಾತುಗಳು!", ಬರೆದದ್ದು ಅಹೋರಾತ್ರ .